ಪ್ರತಿ ತಿಂಗಳು 3,000 ರೂ. ಪಿಂಚಣಿ | ಈ ಯೋಜನೆಗೆ ಯಾರೆಲ್ಲ ಅರ್ಹರು? PM Shram Yogi Mandhan Scheme
ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಶ್ರಮ್ಯೋಗಿ ಮಾನ್-ಧನ್’ ವಂತಿಗೆ ಆಧಾರಿತ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಿದೆ. ಈ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
WhatsApp - 1 | WhatsApp - 2 | WhatsApp - 3 | Join Telegram |

Kannada Mitra - News Desk.
ಇದು ಕೃಷಿ ಕಾರ್ಮಿಕರೂ ಸೇರಿದಂತೆ ದೇಶದ ವಿವಿಧ ವಲಯದ ಅಸಂಘಟಿತ ಕಾರ್ಮಿಕರಿಗಾಗಿಯೇ ಇರುವ ಮಹತ್ವದ ಯೋಜನೆ. 60 ವರ್ಷದ ನಂತರ ಪ್ರತಿ ತಿಂಗಳು 3,000/- ರೂಪಾಯಿ ಪಿಂಚಣಿ ಪಡೆಯುವ ಮೂಲಕ ವೃದ್ಧಾಪ್ಯದಲ್ಲಿ ಯಾರ ಹಂಗೂ ಇಲ್ಲದೇ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಡಲು ನೆರವಾಗುವ ವಿಶಿಷ್ಟ ಯೋಜನೆ ಇದು.
ಯಾರು ಅಸಂಘಟಿತ ಕಾರ್ಮಿಕರು?
ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿಯ ಇತರೆ ಉದ್ಯೋಗಗಳ ಕೆಲಸಗಾರರನ್ನು ಅಸಂಘಟಿತ ಕಾರ್ಮಿಕರೆನ್ನಲಾಗುತ್ತದೆ.
ಈ ಕಾರ್ಮಿಕರಿಗೆ ಅವರ ಜೀವನದ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯೇ ಪ್ರಧಾನಮಂತ್ರಿ ಶ್ರಮ್ಯೋಗಿ ಮಾನ್-ಧನ್ (Prime Minister Shramyogi Man-Dhan Scheme PM-SYM) ಯೋಜನೆ.
ಯೋಜನೆಯ ಫಲಾನುಭವಿಗಳು ಯಾರು?
- ಯೋಜನೆಗೆ ಒಳಪಡುವ ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರಾಗಿದ್ದು, 18 ರಿಂದ 40 ವರ್ಷದೊಳಗಿರಬೇಕು.
- ಅವರ ಮಾಸಿಕ ಆದಾಯ ರೂ. 15,000/- ಅಥವಾ ಅದಕ್ಕಿಂತ ಕಡಿಮೆ ಇರಬೇಕು.
- ಅವರು ಆದಾಯ ತೆರಿಗೆ/ಇ.ಎಸ್.ಐ./ಪಿ.ಎಫ್/ಎನ್.ಪಿ.ಎಸ್. ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು.
- ಬ್ಯಾಂಕ್ ಉಳಿತಾಯ ಖಾತೆ ಹೊಂದಿರಬೇಕು.
ಯೋಜನೆಯ ಸೌಲಭ್ಯಗಳು
ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ. ಫಲಾನುಭವಿಯ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3,000/- ರೂಪಾಯಿಗಳ ಖಚಿತ ಕನಿಷ್ಠ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
ಚಂದಾದಾರರು 10 ವರ್ಷದೊಳಗಾಗಿ ಯೋಜನೆಯಿಂದ ನಿರ್ಗಮಿಸಿದಲ್ಲಿ, ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ.
10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ನಂತರ ನಿರ್ಗಮಿಸಿದಲ್ಲಿ ಅವರು ಪಾವಿತಿಸಿದ ವಂತಿಕೆಯೊಂದಿಗೆ ಪಿಂಚಣಿ ಖಾತೆಗೆ ಜಮೆಯಾಗಿರುವ ಬಡ್ಡಿ ಅಥವಾ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ಪಾವತಿಸಲಾಗುವುದು.
ಫಲಾನುಭವಿಯ ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು, ಅವರು 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗ ನ್ಯೂನತೆಯಿಂದ ವಂತಿಕೆಯನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ ಅವನ/ಅವಳ ಸಂಗಾತಿಯ ನಂತರ ಈ ಯೋಜನೆಗೆ ಸೇರಬಹುದಾಗಿದ್ದು ವಂತಿಕೆಯನ್ನು ಪಾವತಿಸಿ ಮುಂದುವರಿಸಬಹುದಾಗಿರುತ್ತದೆ ಅಥವಾ ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರು.
ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತಪಟ್ಟಲ್ಲಿ, ಅವರ ಪತ್ನಿ / ಪತಿ ಮಾತ್ರ ಪಿಂಚಣಿಯ ಶೇ. 50 ರಷ್ಟು ಪಿಂಚಣಿಯನ್ನು ಪಡೆಯಲು ಅರ್ಹರು. ಯೋಜನೆಯ ವಿದ್ಯುನ್ಮಾನ ಆಧಾರಿತವಾಗಿದ್ದು ಎಸ್.ಎಂ.ಎಸ್. ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗೆ ಕಾಲ ಕಾಲಕ್ಕೆ ತಿಳಿಸಲಾಗುವುದು.
ನೋಂದಣಿ ವಿಧಾನ
ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ (CSC)ಗಳಲ್ಲಿ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಬಹುದು. ಸಿಎಸ್ಸಿಗಳ ವಿವರಗಳನ್ನು ಹತ್ತಿರದ ಎಲ್ಐಸಿ ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇಎಸ್ಐ ಕಾರ್ಪೋರೇಷನ್ ಹಾಗೂ ಭವಿಷ್ಯನಿಧಿ ಸಂಘಟನೆಯ ಕಛೇರಿಗಳಲ್ಲಿ ಪಡೆಯಬಹುದಾಗಿದೆ.
ಕಾರ್ಮಿಕರು ತಮ್ಮೊಂದಿಗೆ ಆರಂಭಿಕ ವಂತಿಕೆ ಮೊತ್ತ, ಆಧಾರ್ ಕಾರ್ಡ್, ಖಾತೆ ಹೊಂದಿರುವ ಬ್ಯಾಂಕಿನ ಐಎಫ್ಎಸ್ಸಿ ಕೋಡ್ ವಿವರಗಳೊಂದಿಗೆ (ಬ್ಯಾಂಕ್ ಪಾಸ್ ಪುಸ್ತಕ, ಚೆಕ್ ಪುಸ್ತಕ, ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು), ತಮ್ಮ ನಾಮನಿರ್ದೇಶಿತರ ವಿವರಗಳು ಮತ್ತು ಮೊಬೈಲ್ ಹ್ಯಾಂಡ್ಸೆಟ್ನೊಂದಿಗೆ ಕಾಮನ್ ಸರ್ವೀಸ್ ಸೆಂಟರ್ಗಳಿಗೆ ಹೋಗಬೇಕು.
ವಯಸ್ಸಿಗೆ ಅನುಗುಣವಾಗಿ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಬೇಕು. ಯಶಸ್ವಿ ಹಣ ಪಾವತಿ ನಂತರ ಆನ್ಲೈನ್ ಶ್ರಮಯೋಗಿ ಪೆನ್ಷನ್ ಸಂಖ್ಯೆಯನ್ನು ನೀಡಲಾಗುತ್ತದೆ. ಸ್ವಿಕೃತಿ ಮತ್ತು ಆಟೋ ಡೆಬಿಟ್ ಮ್ಯಾಂಡೇಟ್ ಅನ್ನು ಫಲಾನುಭವಿಯ ಸಹಿಗೆ ನೀಡಲಾಗುತ್ತದೆ.
ಸಿ.ಎಸ್.ಸಿ.ಗಳಲ್ಲಿ ಸಹಿ ಮಾಡಿರುವ ಫಲಾನುಭವಿಯ ಡೆಬಿಟ್ ಮ್ಯಾಂಡೇಟ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗುತ್ತದೆ. ಸಿಎಸ್ಸಿಗಳಲ್ಲಿ ಶ್ರಮಯೋಗಿ ಕಾರ್ಡ್ ಅನ್ನು ಪ್ರಿಂಟ್ ಮಾಡಿ ಫಲಾನುಭವಿಗೆ ನೀಡಲಾಗುತ್ತದೆ.
ಬ್ಯಾಂಕಿನಿಂದ ದೃಢೀಕರಣ ಬಂದ ನಂತರ ಡೆಬಿಟ್ ಮ್ಯಾಂಡೇಟ್ ಅನ್ನು ಆಕ್ಟಿವೇಟ್ ಮಾಡಲಾಗುತ್ತದೆ ಮತ್ತು ತದ ನಂತರದ ಮಾಸಿಕ ವಂತಿಕೆಯನ್ನು ಅವರ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಕಡಿತ ಮಾಡಿಕೊಳ್ಳಲಾಗುತ್ತದೆ. ಪ್ರತಿಯೊಂದು ವ್ಯವಹಾರವನ್ನು ಎಸ್ಎಂಎಸ್ ಸಂದೇಶ ಕಳಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಛೇರಿಗಳು, ಎಲ್.ಐ.ಸಿಯ ಶಾಖಾ ಕಛೇರಿಗಳು, ಇಪಿಎಫ್ಒ ಮತ್ತು ಇಎಸ್ಐಸಿ ಕಛೇರಿಗಳನ್ನು ಸಂಪರ್ಕಿಸಬಹುದು.
WhatsApp - 1 | WhatsApp - 2 | WhatsApp - 3 | Join Telegram |